ಲೋಕನಾಡು ಶ್ರೀ ಲೋಕನಾಥೇಶ್ವರ ದೇಗುಲದಲ್ಲಿ ವಾರ್ಷಿಕ ಜಾತ್ರೆ

ಲೋಕನಾಡು ಶ್ರೀ ಲೋಕನಾಥೇಶ್ವರ ದೇಗುಲದಲ್ಲಿ ವಾರ್ಷಿಕ ಜಾತ್ರೆ
Facebook
Twitter
LinkedIn
WhatsApp

ಬೆಳ್ತಂಗಡಿ: ಇತಿಹಾಸ ಪ್ರಸಿದ್ದ ತುಳುನಾಡಿನ ಸತ್ಯನಾಪುರದ ಸತ್ಯೋದ ಸಿರಿಯ ಮೂಲ ಆಲಡೆ ಕ್ಷೇತ್ರ ಕಾರಣಿಕದ ಮಣ್ಣು‌ ನಿಡಿಗಲ್‌ನ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಮಾರ್ಚ್ 31ರಿಂದ ಏಪ್ರಿಲ್ 04ರವರೆಗೆ ವಾರ್ಷಿಕ ಸಿರಿ ಜಾತ್ರೆ ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ  ಕೆ.ಎಂ. ನಾಗೇಶ್ ಕುಮಾರ್ ಗೌಡ ಮಾಹಿತಿ ನೀಡಿದರು.ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಾರ್ಚ್ 31ನೇ ಮಂಗಳವಾರ ಬೆಳಿಗ್ಗೆ 06 ಗಂಟೆಯಿಂದ ದೇವತಾ ಕಾರ್ಯಗಳು, ರಾತ್ರಿ ದೈವಗಳ ನೇಮೋತ್ಸವ, ಏಪ್ರಿಲ್ 01ನೇ ಬುಧವಾರ ಬೆಳಿಗ್ಗೆ ಶ್ರೀ ದೇವರ ಉತ್ಸವ, ಭಜನಾ ಸಂಕೀರ್ತನೆ ಉದ್ಘಾಟನೆ, ರಾತ್ರಿ ಅಬ್ಬಗ-ದಾರಗರ ಚೆನ್ನೆಮಣೆ ಆಟ, ಪ್ರಧಾನದೈವ ನೇಮೋತ್ಸವ ಏಪ್ರಿಲ್ 02ನೇ ಗುರುವಾರ ಬೆಳಿಗ್ಗೆ ನಾಗದರ್ಶನ ಸೇವೆ, ದೇವರ ಉತ್ಸವ, ರಾತ್ರಿ 07 ರಿಂದ ವಾರ್ಷಿಕ ನಡ್ವಾಲ್ ಸಿರಿಜಾತ್ರೆ ಹಾಗೂ ರಾತ್ರಿ 08 ಧಾರ್ಮಿಕ ಸಭೆ ರಾತ್ರಿ 10.00 ಗಂಟೆಗೆ ಚೈತನ್ಯ ಕಲಾವಿದರು ಬೈಲೂರು ಇವರಿಂದ ರಾಘು ಮಾಸ್ಟ್ರು ನಾಟಕ ನಡೆಯಲಿದೆ. ಅಲ್ಲದೆ, ಈ ಬಾರಿ 30 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.ಪೂರಕ ಮಾಹಿತಿ ನೀಡಿದ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ ಅವರು; ಉಜಿರೆ ಸಮೀಪ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಿಸರ್ಗ ರಮಣೀಯವಾಗಿ ಕಂಗೊಳಿಸುತ್ತಿರುವ ಕ್ಷೇತ್ರವೇ ಇತಿಹಾಸ ಪ್ರಸಿದ್ಧ ಸತ್ಯನಾಪುರದ ಸತ್ಯೊದ ಸಿರಿಗಳ ಮೂಲ ಆಲಡೆ ಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ. ಇತಿಹಾಸದ ಪ್ರಕಾರ ಸಂತಾನವಿಲ್ಲದ ಬೇಸರದಲ್ಲಿ ಕೊರಗುತ್ತಿದ್ದ ಸತ್ಯನಾಪುರದ ಅರಮನೆಯ ಅಜ್ಜರಿಗೆ ಬ್ರಾಹ್ಮಣ ರೂಪದಲ್ಲಿ ಪ್ರತ್ಯಕ್ಷವಾದ ಇಲ್ಲಿನ ಬೆರ್ಮರು ಪಾಳುಬಿದ್ದ ಈ ಕ್ಷೇತ್ರವನ್ನು ನವೀಕರಣಗೊಳಿಸು ನಿನಗೆ ಸಂತಾನ ಪ್ರಾಪ್ತಿಯಾಗುತ್ತದೆ ಅಂತ ಹೇಳಿ ಮಾಯವಾದರು. ಅದರಂತೆಯೇ ಈ ಕ್ಷೇತ್ರವನ್ನು ನವೀಕರಣಗೊಳಿಸಿದ ಅಜ್ಞರಿಗೆ ಇಲ್ಲಿನ ಬೆರ್ಮರು ಕೊಟ್ಟಂತಹ ಹಿಂಗಾರ ಪ್ರಸಾಧವೇ ಮಗುವಾಗಿ ಜನ್ಮತಾಳಿತು. ನಂತರ ಈ ಮಗುವೆ ತುಳುನಾಡಿನ ಸತ್ಯೊದ ಸಿರಿಯಾಗಿ ಪ್ರಸಿದ್ಧಿ ಪಡೆಯಿತು ಅಂತ ಇಲ್ಲಿನ ಇತಿಹಾಸ ಹೇಳುತ್ತದೆ ಎಂದರು.ಈಗಲೂ ಕೂಡ ಸಂತಾನ ಪ್ರಾಪ್ತಿಯಾಗದವರು ಈ ಕ್ಷೇತ್ರಕ್ಕೆ ಹರಕೆ ಹೇಳಿಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ ಅನ್ನುವ ನಂಬಿಕೆ ಭಕ್ತರಲ್ಲಿದೆ. ತುಳುನಾಡಿನ ಹೆಚ್ಚಿನ ಕುಟುಂಬಗಳಿಗೆ ಅಲಡೆ ಕ್ಷೇತ್ರವಾದ ಈ ದೇವಸ್ಥಾನಕ್ಕೆ ನಾಡಿನಾದ್ಯಂತ ಹೆಚ್ಚಿನ ಭಕ್ತರಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಸುಗ್ಗಿ ಹುಣ್ಣಿಮೆಗೆ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ ಆಯನೋತ್ಸವಾದಿಗಳು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಶ್ರೀ ದೇವರಿಗೆ ಬಲಿ ಉತ್ಸವ, ಕುಮಾರದರ್ಶನ, ಅಬ್ಬಗ ದಾರಗರ ಚನ್ನೆಮಣೆ ಆಟ, ಕ್ಷೇತ್ರದ ಪ್ರಧಾನ ದೈವ ಸೇಮಕಲ್ಲ ಪಂಜುರ್ಲಿ ದೈವಕ್ಕೆ ನೇಮೋತ್ಸವ, ವಾರ್ಷಿಕ ನಡ್ವಾಲ್ ಸಿರಿ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ. ನಾಡಿನಾದ್ಯಂತ ಸಾವಿರಾರು ಭಕ್ತರು ಈ ಸಂಧರ್ಭದಲ್ಲಿ ಸಿರಿ ಜಾತ್ರೋತ್ಸವಕ್ಕೆ ಆಗಮಿಸಿ ಪುನೀತರಾಗುತ್ತಾರೆ, ಮುಖ್ಯ ಗರ್ಭಗುಡಿಯಲ್ಲಿ ಪ್ರಧಾನವಾಗಿ ಸ್ವಯಂಭೂ ಲಿಂಗ ಶ್ರೀ ಲೋಕನಾಥೇಶ್ವರ (ಬೆರ್ಮರು) ದೇವರು, ಪ್ರದಾನ ದೇವರ ಎಡ ಬಾಗದಲ್ಲಿ ಶ್ರೀ ದೇವಿ (ಸತ್ಯೋದ ಸಿರಿ) ಹಾಗೂ ಬಲಬಾಗದಲ್ಲಿ ಸುಬ್ರಹ್ಮಣ್ಯ (ಕುಮಾರ) ಹಾಗೂ ಗಣಪತಿ, ದುರ್ಗಾದೇವಿಯ ಗುಡಿಗಳಿವೆ, ದೇವಸ್ಥಾನದ ಮುಂಬಾಗ ಶ್ರೀ ದೇವರ ಬಂಟ ತುಳುನಾಡಿನ ಕಾರಣಿಕದ ದೈವ ಸೇಮಕಲ್ಲ ಪಂಜುರ್ಲಿ ಗುಡಿ ಇದೆ. ಈ ದೈವಕ್ಕೆ ವರ್ಷಂಪ್ರತಿ ಜಾತ್ರಾ ಸಂದರ್ಭದಲ್ಲಿ ನೇಮೋತ್ಸವ ನಡೆಯುತ್ತದೆ. ದೇವಸ್ಥಾನದ ಬಲಬಾಗದಲ್ಲಿ ನಾಗಬ್ರಹ್ಮರ ಸನ್ನಿದಿ ಇದೆ. ಇಲ್ಲಿ ಜಾತ್ರಾ ಸಂಧರ್ಭದಲ್ಲಿ ಶ್ರೀ ನಾಗಬ್ರಹ್ಮರಿಗೆ ನಾಗದರ್ಶನ ಸೇವೆ ಕೂಡ ನಡೆಯುತ್ತದೆ. ತುಳುನಾಡಿನ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಆ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಹರಕೆ ರೂಪದಲ್ಲಿ ವಿಶೇಷವಾಗಿ ಇಲ್ಲಿನ ಶಕ್ತಿಗಳಿಗೆ ಬಲಿವಾಡು ಸಾಮಗ್ರಿಗಳಾದ ಹುರುಳಿ, ಅಕ್ಕಿ, ತೆಂಗಿನಕಾಯಿ, ಹಿಂಗಾರ, ಎಳ್ಳೆಣ್ಣೆ, ಶಿಯಾಳ ಹಾಗೂ ಪುಂಡಿ ಪಣವೂ ಹರಕೆ ಕಾಣಿಕೆ ಅರ್ಪಿಸುತ್ತಾರೆ. ವಿಶೇಷವಾಗಿ ಪವಿತ್ರವಾದ ನೇತ್ರಾವತಿ ನದಿಯ ದಡದಲ್ಲಿಯೇ ಇರುವಂತಹ ಅಪರೂಪದ ಕ್ಷೇತ್ರವಾದ ಇಲ್ಲಿಗೆ ನಾಡಿನ ಎಲ್ಲಾ ಭಕ್ತರು ಆಗಮಿಸಿ ಈ ಅಪರೂಪದ ಕಾರಣಿಕ ಕ್ಷೇತ್ರದ ಶಕ್ತಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿಕೊಂಡಿದ್ದಾರೆ.ಪ್ರತಿಕಾಗೊಷ್ಟಿಯಲ್ಲಿ, ವ್ಯವಸ್ಥಾಪನಾ ಸಮಿತಿ ಪ್ರಧಾನ ಸಂಚಾಲಕರಾದ ಪಾಂಡುರಂಗ ಮರಾಠೆ, ಜಾತ್ರೋತ್ಸವ ಸಮಿತಿ ಸದಸ್ಯರಾದ ಪ್ರಸಾದ್ ಕುಮಾ‌ರ್ ಏಣಿಯಿರು, ಸಂತೋಷ್ ಗೌಡ ಹಾಗೂ ಯಶೋಧರ ಗೌಡ ಉಪಸ್ಥಿತರಿದ್ದರು.

Latest News

Related Posts