ಆರೋಗ್ಯ ಸಿಬ್ಬಂದಿಗಳು, ಪೊಲೀಸರು, ಮಾಧ್ಯಮದವರ ಜೊತೆಗೆ ಸ್ಥಳೀಯ ಸಂಸ್ಥೆಗಳ ಸ್ವಚ್ಛತಾ ಸಿಬ್ಬಂದಿಗಳನ್ನೂ ಕೊರೋನಾ ವಾರಿಯರ್ಸ್ ಎಂದು ಸರಕಾರ ಹೇಳಿದೆ. ಕೊರೋನಾ ರಣಕೇಕೆಯ ಮಧ್ಯೆ ನುಸುಳಿ ದಿನನಿತ್ಯ ಹೋರಾಟ ಮಾಡುವ, ಈ ಸೇವೆಯಲ್ಲಿ ವೈದ್ಯರಿಗೆ ಸರಿಸಮಾನವಾಗಿ ಶೇಕಡಾ 100 ಸಾಧನೆ ಮಾಡುತ್ತಿರುವ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಗುರುತಿಸುವ ಕಾರ್ಯ ಮೂಡುಬಿದಿರೆಯ ಜವನೆರ್ ಬೆದ್ರ ಸಂಘಟನೆಯ ಮುಖಾಂತರ ನಡೆದಿದೆ.
ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ ನೇತ್ರತ್ವದ ತಂಡವು ಮೂಡುಬಿದಿರೆ ಪುರಸಭೆಯ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳಿಗೆ ಅಕ್ಕಿ ಮತ್ತು ದಿನಬಳಕೆಯ ವಸ್ತುಗಳನ್ನೊಳಗೊಂಡ ಆಹಾರದ ಕಿಟ್ ನ್ನು ವಿತರಿಸಿದೆ. ಇದರೊಂದಿಗೆ ಜವನೆರ್ ಬೆದ್ರ ಸಂಘಟನೆ ಇದುವರೆಗೆ ವಿತರಿಸಿರುವ ಆಹಾರ ಕಿಟ್ ಗಳ ಒಟ್ಟು ಸಂಖ್ಯೆ 500 ದಾಟಿದೆ.








