ಕೆಲ ದಿನಗಳ ಹಿಂದೆ ಉಜಿರೆಯ ದ್ವಿಚಕ್ರ ವಾಹನ ವಿತರಕರೊಬ್ಬರು ಸ್ಕೂಟಿಯ ಸಾಲದ ಕಂತಿನ ಮೊತ್ತದ ಚೆಕ್ ಬೌನ್ಸ್ ಆಗಿರೋದಕ್ಕೆ ಬೆಳ್ತಂಗಡಿ ತಾಲೂಕಿನ ಆಶಾ ಕಾರ್ಯಕರ್ತೆಯೋರ್ವಳಿಗೆ ದಮ್ಕಿ ಹಾಕಿದ ಬಗ್ಗೆ ನಮ್ಮ ಇ-ಪತ್ರಿಕೆಯಲ್ಲಿ ವರದಿ ಮಾಡಿದ್ದೆವು.
ಕೊರೋನಾ ಸೋಂಕು ಹರಡುವಿಕೆಯ ವಿರುದ್ಧ ಬಿಸಿಲು-ನೆರಳೆನ್ನದೆ ದುಡಿಯುತ್ತಿರುವ ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯ ಸಂಕಷ್ಟವನ್ನು ತಿಳಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಈ ವಿಚಾರವಾಗಿ ಸಮಗ್ರ ಮಾಹಿತಿ ಪಡೆದು; ಎಪ್ರಿಲ್ 27ರಂದು ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಗೌಡರ ಮೂಲಕ ಕೆಲಸದ ಒತ್ತಡದೊಂದಿಗೆ ಆರ್ಥಿಕ ಸಂಕಷ್ಟದಲ್ಲಿರುವ ಕೊಯ್ಯೂರಿನ ಆಶಾ ಕಾರ್ಯಕರ್ತೆ ರೇಣುಕಾ ಬಂಗೇರರಿಗೆ ಅವರ ಸ್ಕೂಟಿ ವಾಹನದ ಒಂದು ತಿಂಗಳ ಕಂತಿನ ಮೊಬಲಗು 3,000ರೂಪಾಯಿಗಳನ್ನು ನೀಡುವ ಮೂಲಕ ಕೊರೋನಾ ವಾರಿಯರ್ಸ್ ಓರ್ವಳ ಸಂಕಷ್ಟಕ್ಕೆ ನೆರವಾಗಿದ್ದಾರೆ. ಕೊರೋನಾ ವಾರಿಯರ್ಸ್ ಓರ್ವಳ ಸಂಕಷ್ಟಕ್ಕೆ ನೆರವಾಗುವ ಮೂಲಕ ತಾಲೂಕಿನ ಸಮಸ್ತ ಕೊರೋನಾ ವಾರಿಯರ್ಸ್ ರಲ್ಲಿ ಸ್ಥೈರ್ಯ ತುಂಬಿದ ಎಂ.ಎಲ್.ಸಿ. ಹರೀಶ್ ಕುಮಾರರಿಗೆ ಜೈ ಬಳಗ ಅಭಿವಂದನೆಗಳನ್ನು ಸಲ್ಲಿಸುತ್ತದೆ.








