ಬೆಳ್ತಂಗಡಿ: ಸಂಘ ಆರಂಭವಾದ ದಿನದಿಂದ ಸಮುದಾಯದ ಹಿಂದುಳಿದ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮೂಲಕ, ಸಶಕ್ತರನ್ನಾಗಿ ಮಾಡುವ ಕಾರ್ಯ ನಡೆದಿದೆ. ಕೊರೋನಾದಿಂದ ಮರಾಟಿ ನಾಯ್ಕ ಸಮುದಾಯದ ಜನತೆ ಸಂಕಷ್ಟದಲ್ಲಿದ್ದು, ಸರಕಾರ ಹಾಗೂ ಸಮುದಾಯದ ಶಕ್ತರು ಸಹಾಯ ಮಾಡಬೇಕಿದೆ ಎಂದು ತಾಲೂಕು ಯುವ ಮರಾಟಿ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲಾ ತಿಳಿಸಿದರು.
ಇವರು ಲಾಯಿಲಾದ ಸ್ವ-ಗೃಹದಲ್ಲಿ ಹಮ್ಮಿಕೊಂಡಿದ್ದ ಆಯ್ದ ಮರಾಟಿ ಸಮುದಾಯದ ಜನತೆಗೆ ಆಹಾರ ಸಾಮಗ್ರಿಗಳ ಕಿಟ್ ಅನ್ನು ಗ್ರಾಮಸಮಿತಿಗಳಿಗೆ ಹಸ್ತಾಂತರಿಸುವ ಸಂದರ್ಭ ಮಾತನಾಡಿದರು.
ತಾಲೂಕಿನಲ್ಲಿ ಅತೀ ಕಷ್ಟದಲ್ಲಿರುವ ಆಯ್ದ ಫಲಾನುಭವಿಗಳಿಗೆ ಗ್ರಾಮ ಸಮಿತಿ ಮೂಲಕ ಕಿಟ್ ವಿತರಣೆ ಮಾಡಲಾಗುತ್ತಿದೆ. ಎಲ್ಲರೂ ಮನೆಯಲ್ಲಿಯೇ ಉಳಿದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಬೆಳ್ತಂಗಡಿ ವಲಯ ಅಬಕಾರಿ ನಿರೀಕ್ಷಕರಾದ ಸೌಮ್ಯಲತಾ ಎನ್. ಸಂತೋಷ್ ಕುಮಾರ್ ಆಹಾರ ಕಿಟ್ ಗಳನ್ನು ಗ್ರಾಮಸಮಿತಿಗಳ ಪದಾಧಿಕಾರಿ ಗಳಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ಕೆ ಚಾಲನೆ ನೀಡಿದರು.
ಫಲಾನುಭವಿಗಳಿಗೆ ಆಹಾರದ ಕಿಟ್ ಹಸ್ತಾಂತರಿಸುವ ಸಂದರ್ಭದಲ್ಲಿ ಗ್ರಾಮ ಸಮಿತಿಯವರು ಛಾಯಾಚಿತ್ರ ತೆಗೆಯಬಾರದು, ಜೊತೆಗೆ ಕಿಟ್ ವಿತರಣೆ ನೆಪದಲ್ಲಿ ಅನಗತ್ಯ ತಿರುಗಾಟ ಮಾಡಬಾರದು, ಕಿಟ್ ವಿತರಣೆ ಮಾಡುವವರು ಮಾತ್ರ ತೆರಳಬೇಕು. ಜೊತೆಗೆ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಅಧ್ಯಕ್ಷ ಸಂತೋಷ್ ಕುಮಾರ್ ಸೂಚನೆ ನೀಡಿದರು. ವಿವಿಧ ಆಹಾರ ಸಾಮಗ್ರಿಗಳನ್ನು ಒಳಗೊಂಡ 20 ಕಿಟ್ ಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಸಾದ್ ನಾಯಕ್ ಕುವೆಟ್ಟು, ಕೋಶಾಧಿಕಾರಿ ಪ್ರಜ್ವಲ್ ಕಣಿಯೂರು, ಕಾರ್ಯಕಾರಿ ಸಮಿತಿ ಸದಸ್ಯ ಶರತ್ ಕಣಿಯೂರು, ಲಾಯ್ಲ ಗ್ರಾಮ ಸಮಿತಿ ಅಧ್ಯಕ್ಷರಾದ ಹರೀಶ್ ನಾಯ್ಕ ರಾಘವೇಂದ್ರ ನಗರ, ಬಡಕೋಡಿ-ಕಾಶಿಪಟ್ಣ ಗ್ರಾಮ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಹರೀಶ್ ನಾಯ್ಕ ಕಾಶಿಪಟ್ಣ, ಕಣಿಯೂರು ಗ್ರಾಮ ಸಮಿತಿಯ ಕ್ರೀಡಾ ಕಾರ್ಯದರ್ಶಿಯಾದ ರೋಹಿತ್ ನಾಯ್ಕ , ಗಣೇಶ ನಾಯ್ಕ ಕಕ್ಕೆನಾ, ಗಣೇಶ್ ಎಂ ಲಾಯ್ಲ ಮೊದಲಾದವರು ಉಪಸ್ಥಿತರಿದ್ದರು.








